
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ:’ ಜನಪದಕ್ಕೆ ಯಾವುದೇ ಜಾತಿ, ಮತ, ಧರ್ಮ ಇಲ್ಲ. ಜಾನಪದಕ್ಕೆ ತನ್ನದೇ ಆದ ವೈಶಿಷ್ಟತೆ ಇದ್ದು ಅನಾದಿ ಕಾಲದಿಂದಲೂ ವಿವಿಧ ಜನಪದ ಕಲೆಗಳಿಗೆ ಜನಪದ ವೆಂಬ ನುಡಿಸಿರಿಯ ತೇರು ನಮ್ಮ ಮೂಲ ಸಂಸ್ಕೃತಿ ಬೇರು ಆಗಿದೆ’ ಎಂದು ಕನ್ನಡ ಜಾನಪದ ಪರಿಷತ್ ಸಂಸ್ಥಾಪಕ ರಾಜ್ಯಾಧ್ಯಕ್ಷ ಡಾ. ಎಸ್. ಬಾಲಾಜಿ ತಿಳಿಸಿದರು.
ಹಾವನೂರು ಬಡಾವಣೆಯ ಆಸೆಂಟ್ ಕಾಲೇಜಿನಲ್ಲಿ ಕನ್ನಡ ಜಾನಪದ ಪರಿಷತ್ ದಾಸರಹಳ್ಳಿ ಘಟಕ ಉದ್ಘಾಟನೆ ಮತ್ತು ಪದಗ್ರಹಣ ಹಾಗೂ ಜಾನಪದ ಉತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿನ ಜಿಲ್ಲೆ, ತಾಲೂಕು, ಹೋಬಳಿ ಗ್ರಾಮ ಮಟ್ಟದಲ್ಲಿ ಜಾನಪದ ಪರಿಷತ್ತಿನ ಘಟಕಗಳನ್ನು ಮಾಡಿ, ಅಲ್ಲಿನ ಜನಪದ ಕಲಾವಿದರ ಕನಸುಗಳಿಗೆ ಜೀವ ತುಂಬುವ ಮತ್ತು ಜನಪದವನ್ನು ಬೆಳೆಸುವ ಕೆಲಸ ನಮ್ಮ ಪರಿಷತ್ ಮಾಡುತ್ತಿದೆ’ ಎಂದು ಹೇಳಿದರು.
ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಕಮಿಟಿ ರಾಜ್ಯಾಧ್ಯಕ್ಷ ಬಿ.ಎಂ. ಚಿಕ್ಕಣ್ಣ,’ ಸರ್ಕಾರವು ಕೂಡ ಕನ್ನಡ ಜಾನಪದ ಕಲಾವಿದರಿಗೆ ಪ್ರೋತ್ಸಾಹ ನೀಡಿ, ಜನಪದ ಕಲೆ,ಸಂಸ್ಕೃತಿ, ಪರಂಪರೆಯನ್ನು ಉಳಿಸುವ ಕೆಲಸ ಮಾಡಬೇಕು’ಎಂದು ಸರ್ಕಾರವನ್ನು ಒತ್ತಾಯಿಸಿದರು.
ಸಮಾರಂಭದಲ್ಲಿ ರಾಮನಗರದ ಜಾನಪದ ಕಲಾತಂಡದವರಿಂದ ಡೊಳ್ಳು ಕುಣಿತ, ನೆಲಮಂಗಲದ ಸೂಲಗಿತ್ತಿ ಅಕ್ಕ ಮಾರಮ್ಮ ಸೇವಾ ಟ್ರಸ್ಟ್ ಅವರಿಂದ ಸೋಬಾನೆ ಪದಗಳು, ಜಾನಪದ ಗಾಯಕರಾದ ಜೋಗಿಲ ಸಿದ್ದರಾಜು ಮತ್ತು ಕುಣಿಗಲ್ ರಾಮಚಂದ್ರ ಅವರಿಂದ ಜಾನಪದ ಗೀತೆಗಳು, ಭೂಮಿಕಾ ಸೇವಾ ಫೌಂಡೇಶನ್ ಮತ್ತು ಆಸೆಂಟ್ ಕಾಲೇಜಿನ ವಿದ್ಯಾರ್ಥಿಗಳಿಂದ ಜಾನಪದ ಗೀತೆಗಳಿಗೆ ನೃತ್ಯ ಕಾರ್ಯಕ್ರಮ ಜರುಗಿತು.
ಜನಪದ ಸಂಶೋಧಕ ಡಾ. ಚಿಕ್ಕ ಹೆಜ್ಜಾಜಿ ಮಹಾದೇವ್ ಅವರು ಜನಪದ ಪ್ರಕಾರಗಳಾದ ಗಾಯನ, ನೃತ್ಯ, ಗಾದೆ ಮತ್ತು ಒಗಟುಗಳ ಬಗ್ಗೆ ವಿಶ್ಲೇಷಿಸಿದರು.ಕಾಲೇಜಿನ ಉಪನ್ಯಾಸಕ ಡಿ.ಬಿ. ಚಿಕ್ಕ ವೀರಯ್ಯ ಬರೆದ ‘english study material’ ಎಂಬ ಕೃತಿ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಡಾ. ರಿಯಾಜ್ ಪಾಷ, ದಾಸರಹಳ್ಳಿ ಕ್ಷೇತ್ರ ಘಟಕದ ಅಧ್ಯಕ್ಷ ವೈ.ಬಿ.ಎಚ್. ಜಯದೇವ್, ಕತೆಗಾರ ಕಂನಾಡಿಗಾ ನಾರಾಯಣ, ಚಿತ್ರನಟಿ ಅಭಿನಯ,ಸಮಾಜ ಸೇವಕ ಡಾ. ಸಂಗನ ಬಸಪ್ಪ ಬಿರಾದಾರ್, ಆಸೆಂಟ್ ಕಾಲೇಜಿನ ಪ್ರಾಂಶುಪಾಲ ಬಿ.ಎಂ. ವೆಂಕಟೇಶ್, ನಾಗಸಂದ್ರ ರೋಟ್ರ್ಯಾಕ್ ಕ್ಲಬ್ ಅಧ್ಯಕ್ಷ ರಂಜಿತ್ ದಯಾನಂದ್, ಪದಾಧಿಕಾರಿಗಳಾದ ಗೌರವ ಅಧ್ಯಕ್ಷ ರಾಜೇಂದ್ರ ಕೊಣ್ಣೂರ, ಖಜಾಂಚಿ ಕೃಷ್ಣಮೂರ್ತಿ ಎನ್. ಡಿ ಮುಂತಾದವರಿದ್ದರು.