
ಹುಬ್ಬಳ್ಳಿ,: ಮಳೆಗಾಲದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಸೂಚಿಸಿದ್ದು, ವಿದ್ಯುತ್ ಅವಘಡಗಳು ಸಂಭವಿಸದಂತೆ ಇಲಾಖೆಯೊಂದಿಗೆ ಸಹಕರಿಸುವಂತೆ ಕೋರಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಹೆಸ್ಕಾಂ, ಮಳೆಗಾಲ ಸಂದರ್ಭದಲ್ಲಿ ಗಾಳಿ, ಮಳೆ, ಸಿಡಿಲು, ಮಿಂಚು ಬಂದಾಗ ವಿದ್ಯುತ್ ಅವಘಡಗಳು ಉಂಟಾಗುವ ಸಾಧ್ಯತೆಗಳಿರುತ್ತವೆ. ಸಾರ್ವಜನಿಕ ಸ್ಥಳಗಳಲ್ಲಿ ವಿದ್ಯುತ್ ಕಂಬಗಳು, ವಿದ್ಯುತ್ ಪರಿವರ್ತಕ (ಟ್ರಾನ್ಸ್ಫಾರ್ಮರ್) ಗಳಲ್ಲಿರುವ ವಿದ್ಯುತ್ ತಂತಿಗಳು ಜನರಿಗೆ ಅಪಾಯ ತಂದೊಡ್ಡಬಹುದು. ಈ ಕಾರಣದಿಂದ ಸಾರ್ವಜನಿಕರು ಜಾಗೃತೆ ವಹಿಸಬೇಕಾಗಿದ್ದು, ಸುರಕ್ಷಿತ ಅಂತರ ಕಾಯ್ದುಕೊಳ್ಳಲು ತಿಳಿಸಿದೆ.
ಮಳೆಗಾಲದಲ್ಲಿ ಸಿಡಿಲು, ಮಳೆ ಬರುವಾಗ ವಿದ್ಯುತ್ ತಂತಿಗಳಲ್ಲಿ ತಾಂತ್ರಿಕ ತೊಂದರೆಗಳು ಉಂಟಾದಾಗ ವಿದ್ಯುತ್ ಕಂಬ, ತಂತಿ ಮತ್ತು ಪರಿವರ್ತಕ (ಟ್ರಾನ್ಸ್ಫಾರ್ಮರ್) ಗಳ ಸಮೀಪ ಹೋಗಬಾರದು ಹಾಗೂ ಸಾರ್ವಜನಿಕರು ಅದನ್ನು ಸರಿಪಡಿಸಲು ಅಥವಾ ಮುಟ್ಟಲು ಹೋಗಬಾರದು ಎಂದು ತಿಳಿಸಿದೆ.
ವಿದ್ಯುತ್ ತಂತಿಯ ಇಕ್ಕೆಲಗಳಲ್ಲಿನ ಮರಗಳ ಕೊಂಬೆಗಳು ವಿದ್ಯುತ್ ತಂತಿಗೆ ತಾಗುವಂತಿದ್ದರೆ ಈ ಕುರಿತು ಇಲಾಖೆಗೆ ಮಾಹಿತಿ ನೀಡುವುದು. ಈ ನಿಟ್ಟಿನಲ್ಲಿ ಹೆಸ್ಕಾಂ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಕೆಲವು ಖಾಸಗಿ ಜಾಗಗಳಲ್ಲಿ ಕೊಂಬೆಗಳು ವಿದ್ಯುತ್ ತಂತಿಗಳಿಗೆ ತಾಗಿಕೊಂಡಿದ್ದರೆ ಅವುಗಳನ್ನು ತೆರವುಗೊಳಿಸುವ ಕಾರ್ಯವನ್ನು ಸಾರ್ವಜನಿಕರು ಮಾಡಬಾರದು. ಇಂತಹ ಕೆಲಸ ಮಾಡುವುದಿದ್ದರೂ ಸ್ಥಳೀಯ ಹೆಸ್ಕಾಂ ಕಚೇರಿಗೆ ಮಾಹಿತಿ ನೀಡಿ ಅವರ ಉಪಸ್ಥಿತಿಯಲ್ಲಿ ತೆರವುಗೊಳಿಸಲು ಸಹಕರಿಸುವುದು.
ತುಂಡಾಗಿ ಬಿದ್ದಿರುವ ವಿದ್ಯುತ್ ತಂತಿಗಳು, ಒದ್ದೆಯಾಗಿರುವ ವಿದ್ಯುತ್ ಕಂಬಗಳು ಹಾಗೂ ಇತರೆ ವಿದ್ಯುತ್ ಉಪಕರಣಗಳನ್ನು ಮುಟ್ಟಬಾರದು. ಜಾನುವಾರುಗಳನ್ನು ವಿದ್ಯುತ್ ಕಂಬಗಳಿಗೆ ಕಟ್ಟಬಾರದು ಹಾಗೂ ಬಟ್ಟೆ ಒಣಗಿಸಲು ಬಳಸಬಾರದು. ಸಿಡಿಲು, ಮಿಂಚು ಮಳೆ ಸಂದರ್ಭದಲ್ಲಿ ವಿದ್ಯುತ್ ಪರಿಕರಗಳ ಸಮೀಪ ನಿಲ್ಲಬಾರದು.
ಇಲಾಖೆಗೆ ಸಂಬಂಧಿಸಿದ ವ್ಯಕ್ತಿಗಳನ್ನು ಹೊರತುಪಡಿಸಿ ಇತರರು ವಿದ್ಯುತ್ ಕಂಬಗಳನ್ನು ಹತ್ತುವುದು ಮತ್ತು ದುರಸ್ತಿ ಕಾರ್ಯ ಮಾಡುವುದು ಅಪಾಯಕಾರಿ ಹಾಗೂ ಕಾನೂನಿನ ಪ್ರಕಾರ ನಿಷೇಧ. ಮನೆಯ ವಿದ್ಯುತ್ ಉಪಕರಣಗಳನ್ನು ಪರಿಣಿತರಿಂದ ದುರಸ್ತಿಗೊಳಿಸಬೇಕು. ವಿದ್ಯುತ್ ಸ್ವಿಚ್ ಹಾಗೂ ಉಪಕರಣಗಳನ್ನು ಒದ್ದೆ ಕೈಗಳಿಂದ ಮುಟ್ಟಬಾರದು. ವಿದ್ಯುತ್ ತಂತಿಗಳ ಕೆಳಗೆ ಮಕ್ಕಳನ್ನು ಆಟ ಆಡಲು ಬಿಡಬೇಡಿ. ಟ್ರಾನ್ಸ್ಫಾರ್ಮರ್ ಗಳ ಸುತ್ತಲಿನ ತಂತಿ ಬೇಲಿ ಮುಟ್ಟಬಾರದು, ಹೊಲ ಮತ್ತು ತೋಟದ ಮನೆಗಳ ತಂತಿ ಬೇಲಿಗಳಿಗೆ ಅನಧಿಕೃತವಾಗಿ ವಿದ್ಯುತ್ ಹಾಯಿಸಬಾರದು ಎಂದು ತಿಳಿಸಿದೆ.
ರಸ್ತೆಗಳಲ್ಲಿ ನಡೆದಾಡುವಾಗ ವಿದ್ಯುತ್ ಕಂಬಗಳಿಂದ ದೂರವಿರಬೇಕು. ವಾಹನಗಳನ್ನು ರಸ್ತೆಗಳ ಪಕ್ಕದಲ್ಲಿರುವ ವಿದ್ಯುತ್ ಕಂಬದ ಸನಿಹ ಅಥವಾ ಅವುಗಳ ಅರ್ಥಿಂಗ್ ವೈಯರ್ /ಗೈ ವೈಯರ್ ಹತ್ತಿರ ವಾಹನ ನಿಲುಗಡೆ ತಪ್ಪಿಸಬೇಕು. ಕೆಲವೊಮ್ಮೆ ಒಂದು ವಿದ್ಯುತ್ ಕಂಬದಿಂದ ಮತ್ತೊಂದು ವಿದ್ಯುತ್ ಕಂಬಕ್ಕೆ ಹಾದು ಹೋಗುವ ವಿದ್ಯುತ್ ತಂತಿಗಳು ಜೋತು ಬಿದ್ದಿದ್ದರೆ, ಅವು ಸಾರ್ವಜನಿಕರ ಕೈಗೆ ಎಟಕುವಂತಿದ್ದರೆ ಅಥವಾ ಅಪಾಯಕಾರಿ ಮಟ್ಟದಲ್ಲಿದ್ದರೆ, ರಸ್ತೆ ಅಥವಾ ಫುಟ್ ಪಾತ್ ಗಳಲ್ಲಿ ಸಾಗುವಾಗ ಜೋತು ಬಿದ್ದ ತಂತಿಗಳ ಬಗ್ಗೆ ಗಮನವಿರಲಿ, ಅಂತಹ ಜೋತುಬಿದ್ದ ತಂತಿಗಳ ಹತ್ತಿರ ಸುಳಿಯಬಾರದು. ಇಂತಹ ಸಂದರ್ಭದಲ್ಲಿ ಕೂಡಲೇ ಹೆಸ್ಕಾಂʼನ 24×7 ಸಹಾಯವಾಣಿ 1912 ಗೆ ಕರೆ ಮಾಡಿ ಮಾಹಿತಿ ನೀಡಬೇಕು.
*ಸಹಾಯವಾಣಿಗೆ ಮಾಹಿತಿ ನೀಡಿ*
ವಿದ್ಯುತ್ ಸರಬರಾಜು ಜಾಲ ವ್ಯವಸ್ಥೆಯಲ್ಲಿ ದೋಷಗಳು ಕಂಡುಬಂದಲ್ಲಿ ಅಥವಾ ವಿದ್ಯುತ್ ಅವಘಡ ಸಂಭವಿಸಿದಲ್ಲಿ ಹೆಸ್ಕಾಂನ 24×7 ಸಹಾಯವಾಣಿ 1912 ಸಂಖ್ಯೆಗೆ ಕರೆ ಮಾಡಿ ಅಥವಾ ವಾಟ್ಸಾಪ್ ಸಂಖ್ಯೆ 9480883899 ಗೆ ಮಾಹಿತಿ ನೀಡಿ. ಇಲ್ಲವೆ ಸಮೀಪದ ಹೆಸ್ಕಾಂ ಕಚೇರಿ ಇಲ್ಲವೇ ಹೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಕೋರಿದೆ.