April 18, 2025

ಪಬ್ಲಿಕ್ ರೈಡ್ ನ್ಯೂಸ್ ಹುಬ್ಬಳ್ಳಿ

ಹುಬ್ಬಳ್ಳಿ: ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳುವಳಿಕೆಯಾಗಿದ್ದರೆ ಬಗೆಹರಿಸುತ್ತೇವೆ. ತಪ್ಪಾಗಿದ್ದರೆ ಕ್ಷಮೆ ಕೇಳಲು ನಾನು ಹಿಂಜರಿಯಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ನಗದಲ್ಲಿಂದು ಫಕೀರ್ ಶ್ರೀ ದಿಂಗಾಲೇಶ್ವರ ಶ್ರೀಗಳ ನೇತೃತ್ವದಲ್ಲಿ ಮೂರುಸಾವಿರಮಠದ ಮಠದಲ್ಲಿ ಬುಧವಾರ ನಡೆದ ಚಿಂತನ ಮಂಥನ ಸಭೆಯ ಬಳಿಕ ಧಾರವಾಡ ಕ್ಷೇತ್ರದಿಂದ ಪ್ರಲ್ಹಾದ್ ಜೋಶಿ ಬದಲಾಯಿಸುವ ನಿರ್ಣಯ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ನಾನು ಲೋಕಸಭಾ ಸದಸ್ಯನಾದ ಮೇಲೆ ಕ್ಷೇತ್ರದಲ್ಲಿ ಎಂಟರಲ್ಲಿ ಏಳು ಜನ ಲಿಂಗಾಯತರಿಗೆ ಟಿಕೆಟ್ ಕೊಡಲಾಗಿದೆ. ಎಲ್ಲಾ ಸಮುದಾಯಕ್ಕೂ ನಾವು ಅವಕಾಶ ಕೊಟ್ಟಿದ್ದೇವೆ. ದಿಂಗಾಲೇಶ್ವರ ಸ್ವಾಮೀಜಿಗಳ ಬಗ್ಗೆ ನನಗೆ ಶ್ರದ್ಧೆ ಇದೆ. ಶಿರಹಟ್ಟಿ ಪೀಠ ನನಗೆ ಸದಾಕಾಲ ಆಶೀರ್ವಾದ ಮಾಡಿದೆ ಎಂದರು.

ಇನ್ನು ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳುವಳಿಕೆಯಾಗಿದ್ದರೆ ಬಗೆಹರಿಸುತ್ತೇವೆ. ತಪ್ಪಾಗಿದ್ದರೆ ಕ್ಷಮೆ ಕೇಳಲು ನಾನು ಹಿಂಜರಿಯಲ್ಲ, ಏನಾದರೂ ತಪ್ಪು ಮಾಡಿದ್ದರೆ ನೇರವಾಗಿ ಹೇಳಲಿ ಕ್ಷಮೆ ಕೇಳುತ್ತೇನೆ.‌ ದಿಂಗಾಲೇಶ್ವರ ಸ್ವಾಮೀಜಿ ಏನು ಹೇಳಿದರೂ ನನಗೆ ಆಶಿರ್ವಾದ ಇದ್ದಂತೆ. ಈ ಸಂದರ್ಭದಲ್ಲಿ ನಾನು ಹೆಚ್ಚೇನೂ ಮಾತಾಡಲ್ಲ, ಸ್ವಾಮೀಜಿ ಸಮಯ ಕೊಟ್ಟರೆ ಅವರ ಜೊತೆ ಮಾತನಾಡಲು ನಾನು ತಯಾರಿದ್ದೇನೆ ಎಂದು ಹೇಳಿದರು.

ಜೆಡಿಎಸ್ ಪದಾಧಿಕಾರಿಗಳು, ಪ್ರಮುಖರ ಸಭೆಯನ್ನು ಕರೆಯಲಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಪ್ರಮುಖರು, ಕಾರ್ಯಕರ್ತರು ಸೇರಿ ಚುನಾವಣೆ ಮಾಡುತ್ತಿದ್ದೇವೆ. ಕ್ಷೇತ್ರದಾದ್ಯಂತ ದೊಡ್ಡ ಸಂಖ್ಯೆಯಲ್ಲಿ ಮತದಾರರನ್ನು ಭೇಟಿಯಾಗುತ್ತೇವೆ. ದೊಡ್ಡ ಮಹುಮತದಿಂದ ಬಿಜೆಪಿ ಗೆಲ್ಲಲಿದೆ. ರಾಜ್ಯದ್ಯಂತ ಬಿಜೆಪಿ 28ಕ್ಕೆ 28 ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಾರ್ಟಿಯವರು ಹತಾಶರಾಗಿ ಅತ್ಯಂತ ಕ್ಷುಲ್ಲಕ ಭಾಷೆಯಿಂದ ಮಾತಾಡಲು ಪ್ರಾರಂಭಿಸಿದ್ದಾರೆ. ಮೋದಿಯವರ ಬಗ್ಗೆ ಎಷ್ಟು ಕ್ಷುಲ್ಲಕ ಭಾಷೆ ಬಳಸುತ್ತಾರೋ ಅಷ್ಟು ಮೋದಿಯವರ ಜನಪ್ರಿಯತೆ ಹೆಚ್ಚುತ್ತದೆ. ಬಿಜೆಪಿಯ ಕಾರ್ಯಕರ್ತರು ಮತ್ತಷ್ಟು ಉತ್ಸಾಹದಿಂದ ಕೆಲಸ ಮಾಡುತ್ತಾರೆ. ಬಿಜೆಪಿಯಲ್ಲಿ ಕೆಲವು ಕ್ಷೇತ್ರಗಳಲ್ಲಿ ದುಃಖ, ದುಮ್ಮಾನ, ಬಂಡಾಯ ಇದೆ. ಎಲ್ಲಾ ಕಡೆ ಮಾತುಕತೆ ಮಾಡಲಾಗಿದೆ. ದಾವಣಗೆರೆ ಮಾತುಕತೆಯಾಗಿದೆ, ರಾಯಚೂರು ಬಾಕಿ ಉಳಿದಿದೆ ಅದನ್ನೂ ಸರಿ ಮಾಡುತ್ತೇವೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು.

Leave a Reply

Your email address will not be published. Required fields are marked *

error: Content is protected !!