April 19, 2025

ಪಬ್ಲಿಕ್ ರೈಡ್ ನ್ಯೂಸ್

ಹುಬ್ಬಳ್ಳಿ: ಲೋಕಸಭಾ ಚುನಾವಣೆ ಸ್ಪರ್ಧೆ ವಿಚಾರವಾಗಿ ಹೈಕಮಾಂಡ್ ಏನೂ ತೀರ್ಮಾನ ತೆಗೆದುಕೊಳ್ಳುತ್ತದೆಯೋ ಅದಕ್ಕೆ ನಾನು ಬದ್ದ ಅಲ್ಲದೇ ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ವಿಚಾರವಾಗಿ ಧಾರವಾಡ, ಹಾವೇರಿ ಕ್ಷೇತ್ರಕ್ಕೆ ಟಿಕೆಟ್ ನೀಡುವಂತೆ ಹೈಕಮಾಂಡ್ ಗೆ ಬೇಡಿಕೆ ಇಟ್ಟಿದೆ, ಆದರೆ ಬೇರೆ ಬೇರೆ ಕಾರಣದಿಂದ ಅದು ಕೈತಪ್ಪಿದೆ. ಹೀಗಾಗಿ ಆ ವಿಚಾರವಾಗಿ ನಾನು ಹೆಚ್ಚು ಮಾತನಾಡುವುದಿಲ್ಲ. ಸದ್ಯ ಬೆಳಗಾವಿ ಲೋಕಸಭಾ ಕ್ಷೇತ್ರದ ಚರ್ಚೆ ನಡೆದಿದೆ ಎಂದರು.

ಬೆಳಗಾವಿಯಲ್ಲಿ ಶೆಟ್ಟರ್ ಗೋಬ್ಯಾಕ್ ಅಭಿಯಾನದ ವಿಚಾರವಾಗಿ ಮಾತನಾಡಿ, ಬೆಳಗಾವಿಯಲ್ಲಿ ಪರಿಸ್ಥಿತಿ ಸರಿಯಿಲ್ಲ ಸುಳ್ಳು, ಈಗಾಗಲೇ ಬೆಳಗಾವಿ ಜಿಲ್ಲೆಯ ನಾಯಕರ ಜೊತೆಗೂ ಚರ್ಚೆ ನಡೆಸಿದ್ದೇನೆ. ಹೈಕಮಾಂಡ್ ನಾಯಕರ ನಮ್ಮೊಂದಿಗೆ ಪೋನ್ ಸಂಪರ್ಕದಲ್ಲಿದ್ದಾರೆ, ಚರ್ಚೆ ಮಾಡುತ್ತೇನೆ. ವಿ.ಸೋಮಣ್ಣ ಅವರಿಗೂ ತುಮಕೂರು ಅಲ್ಲಿ ಮೊದಲು ವಿರೋಧ ವ್ಯಕ್ತವಾಗಿತ್ತು. ಟಿಕೆಟ್ ನೀಡಿದ ಬಳಿಕ ಎಲ್ಲ ಸರಿ ಹೋಗಿದೆ. ಅದರಂತೆ ಬೆಳಗಾವಿಯಲ್ಲಿಯೂ ಆಗಲಿದೆ. ಇನ್ನು ಸದ್ಯ ಬೆಳಗಾವಿ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ತೀರ್ಮಾನ ಆಗಿಲ್ಲ, ಇದೀಗ ಚರ್ಚೆ ಹಂತದಲ್ಲಿದೆ. ಯಡಿಯೂರಪ್ಪ, ವಿಜಯೇಂದ್ರ ಕೂಡಾ ಈ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ಎರಡನೇ ಒಟ್ಟಿ ಬಿಡುಗಡೆ ಬಳಿಕ ಅಧ್ಯಕ್ಷರು ಹಾಗೂ ವಿಜೇಯಂದ್ರ ಅವರು ಮಾತಾಡಿದ್ದಾರೆ. ನಾಲ್ಕು ಗೋಡೆ ಮಧ್ಯೆ ನಡೆದ ಚರ್ಚೆಗಳನ್ನು ಬಹಿರಂಗವಾಗಿ ತಿಳಿಸಲು ಅಗುವುದಿಲ್ಲ ಎಂದು ಹೇಳಿದರು.

ಶೆಟ್ಟರ್ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಸಂಚು ರೂಪಿಸಲಾಗುತ್ತಿದೆಯೇ ಎಂಬ ಪ್ರಶ್ನೆಗೆ, ಅದನ್ನು ನಾನು ಮಾತನಾಡುವುದಿಲ್ಲ. ನಮ್ಮ ಬೆಂಬಲಿಗರು ಹೇಳತ್ತಾರೆ. ಅಷ್ಟೇ ಅಲ್ಲದೇ ಜನರಿಗೆ ಗೊತ್ತಿದೆ. ಅವರೇ ಪಾಠ ಕಲಿಸತ್ತಾರೆ‌. ಅದರ ಬಗ್ಗೆ ನೋ ಕಮೆಂಟ್ ಎಂದು ಹೆಸರು ಹೇಳದೇ ಪರೋಕ್ಷವಾಗಿ ಪ್ರಲ್ಹಾದ್ ಜೋಶಿ ವಿರುದ್ಧ ಕಿಡಿಕಾರಿದರು. ಪ್ರಲ್ಹಾದ್ ಜೋಶಿ ಅವರ ಪರವಾಗಿ ಪ್ರಚಾರ ಮಾಡುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಪಕ್ಷ ಯಾರಿಗೆ ಟಿಕೆಟ್ ಕೊಟ್ಟರು ನಾನು ಪ್ರಚಾರ ಮಾಡುತ್ತೇನೆಂದು ಹೇಳುವ ಮೂಲಕ ಜೋಶಿ ಹೆಸರು ಹೇಳದೆ ನುಡಿದರು.

ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಬೇಕೆಂಬ ಆಸೆ ಎಲ್ಲರಿಗೂ ಇದ್ದು, ಅದರಂತೆ ಪಕ್ಷ ಗೆಲ್ಲಿಸಲು ಶ್ರಮಿಸಲಾಗುವುದು. ಈ ಬಾರಿಯೂ ಎಲ್ಲೆಡೆ ಮೋದಿ, ಬಿಜೆಪಿನ ಅಲೆ ಇದೆ. ಬಿಜೆಪಿಗೆ ಪೂರಕವಾದ ವಾತಾವಾರಣವಿದೆ, ರಾಜ್ಯದ 28 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸುವ ವಿಶ್ವಾಸವಿದೆ. ಇನ್ನೂ ಟಿಕೆಟ್ ವಿಚಾರವಾಗಿ ದೆಹಲಿಗೆ ಹೋಗುವುದಿಲ್ಲ. ಬದಲಾಗಿ ಬೆಂಗಳೂರಿಗೆ ಹೋಗುವ ಸಾಧ್ಯತೆಯಿದೆ. ಖಂಡಿತವಾಗಿ ಈ ಬಾರಿ ಲೋಕಸಭಾ ಟಿಕೆಟ್ ಸಿಗುವ ಭರವಸೆ ಇದೆ ಎಂದ ಅವರು,‌ ಲೋಕಸಭಾ ಟಿಕೆಟ್ ಬಳಿಕ ಶೆಟ್ಟರ್ ಕಾಂಗ್ರೆಸ್ ತೊರೆದಿರುವುದಕ್ಕೆ ಪಶ್ಚಾತ್ತಾಪ ಪಡುತ್ತಾರೆ ಎಂಬ ಡಿಸಿಎಂ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ನಾನು ಕಾಂಗ್ರೆಸ್ ಹಾಗೂ ಬಿಜೆಪಿಗೆ ಹೋದಾಗ ಪಶ್ಚಾತ್ತಾಪ ಪಟ್ಟಿಲ್ಲ. ಬೇರೆಯವರಿಗೆ ಪಶ್ಚಾತ್ತಾಪ ಪಡಿಸುತ್ತೇನೆ. ಹಾಗಾಗಿ ನನಗೆ ಪಶ್ಚಾತ್ತಾಪ ಎಂಬುದಿಲ್ಲ ತಿರುಗೇಟು ನೀಡಿದರು.

Leave a Reply

Your email address will not be published. Required fields are marked *

error: Content is protected !!